ಮುಗ್ಧ ಜನರ ಮೂಢ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು, ಅವರನ್ನು ವಂಚಿಸಿ ಹಣ ಗಳಿಸುವುದನ್ನೇ ಕೆಲವರು ವೃತ್ತಿ ಮಾಡಿಕೊಂಡುಬಿಟ್ಟಿದ್ದಾರೆ. ಅಂಥಾ ಒಂದು ಮೂಢನಂಬಿಕೆಯ ಸುತ್ತ ನಡೆಯುವ ಕಥೆಯನ್ನು ನಿರ್ದೇಶಕ ಪಿ.ಎಚ್.ವಿಶ್ವನಾಥ್ ಅವರು ಆಡೇ ನಮ್ ಗಾಡ್ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಆಡೊಂದನ್ನು ದೇವರಾಗಿಸಿ ಅದಕ್ಕೆ ಗುಡಿ ಕಟ್ಟಿ, ಪೂಜೆ ಮಾಡೋ ನೆಪದಲ್ಲಿ ಜನರಿಂದ ಹಣ ಪೀಕುವ ಸ್ವಾಮಿಯ ಕಥೆ ಆಡೇ ನಮ್ ಗಾಡ್ ಚಿತ್ರದಲ್ಲಿದೆ.
ಈ ಚಿತ್ರದ ಮೂಲಕ ನಿರ್ದೇಶಕರು ಗಂಭೀರವಾದ ವಿಷಯವೊಂದನ್ನು ಲಘು ಹಾಸ್ಯದ ಮೂಲಕ ಹೇಳಿದ್ದಾರೆ, ಶಿವಲಿಂಗ, ತುಕಾರಾಮ, ತಿಪ್ಪೇಶಿ ಸೇರಿ ೪ ಜನ ಸ್ನೇಹಿತರು ಗೂಡ್ಸ್ ಗಾಡಿ ನಡೆಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇವರ ಗಾಡಿಯಲ್ಲಿ ಆಕಸ್ಮಿಕವಾಗಿ ಯಾರೋ ಒಬ್ಬರು ಆಡೊಂದನ್ನು ಮರೆತು ಬಿಟ್ಟಿರುತ್ತಾರೆ. ಅದು ಈ ಹುಡುಗರ ಅದೃಷ್ಟದ ಬಾಗಿಲನ್ನೇ ತೆರೆಸಿಬಿಡುತ್ತದೆ. ಕೆಲವೊಂದು ಸಂದರ್ಬಗಳಲ್ಲಿ ಅಡ್ಡಹೋಗಿ ಅಪಾಯದಿಂದ ಪಾರು ಮಾಡುತ್ತದೆ, ಅದು ಆಕಸ್ಮಿಕವಾಗಿದ್ರೂ ಜನರ ಕಣ್ಣಿಗೆ ಅದು ಪವಾಡವಾಗಿ ಕಾಣಿಸುತ್ತದೆ, ಮೂಢನಂಬಿಕೆ, ಆಚರಣೆಗಳನ್ನು ತಕ್ಷಣವೇ ನಂಬುವ ಜನ ಈ ಆಡನ್ನು ದೇವರ ಪ್ರತಿರೂಪ ಎಂದು ನಂಬಿ ಪೂಜೆ ಮಾಡಲು ಆರಂಭಿಸುತ್ತಾರೆ. ತಾನಾಗೇ ಒಲಿದು ಬಂದ ಅದೃಷ್ಟವನ್ನು ಈ ನಾಲ್ವರು ಸ್ನೇಹಿತರು ತಿರಸ್ಕರಿಸಲಾಗದೆ, ಬರೋ ಆದಾಯವನ್ನು ಅನುಭವಿಸುತ್ತಾರೆ, ಅವರಲ್ಲಿ ಒಬ್ಬನು ಮಾತ್ರ ಇದಕ್ಕೆ ಒಪ್ಪದೆ, ಹೀಗೆ ಮಾಡೋದು ಸರಿಯಲ್ಲ ಎಂದು ಗಾಡಿಯನ್ನೇ ಹೋಟೆಲ್ ಮಾಡಿಕೊಂಡು ಸೆಟಲ್ ಆಗುತ್ತಾನೆ, ಆದರೂ ಸ್ನೇಹಿತರನ್ನು ಬಿಟ್ಟು ಕೊಡಲಾಗದೆ ಅವರೊಂದಿಗೇ ಇರುತ್ತಾನೆ. ಮುಂದೆ ಈ ಆಡು ದೇವರಾದ ಕಥೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತದೆ, ಜನರಿಂದ ಸಾಕಷ್ಟು ಹಣ ಸಂಗ್ರಹವಾಗುತ್ತದೆ, ಮುಂದೆ ಈ ಹುಡುಗರ ವ್ಯವಹಾರಕ್ಕೆ ಸ್ವಾಮೀಜಿಯೊಬ್ಬನ ಎಂಟ್ರಿ ಆಗುತ್ತದೆ, ಆತನ ಕುತಂತ್ರಕ್ಕೆ ಈ ನಾಲ್ವರು ಅಮಾಯಕ ಹುಡುಗರು ದಾಳವಾಗಬೇಕಾಗುತ್ತದೆ, ಯಾವತ್ತೂ ದುಡಿದು ಗಳಿಸಿದ ಹಣವೇ ಶಾಶ್ವತವಾದುದು, ಅನಾಯಾಸವಾಗಿ ಬರುವ ಶ್ರೀಮಂತಿಕೆ ಎಂದಿಗೂ ಉಳಿಯುವುದಿಲ್ಲ ಎಂಬ ಅರಿವು ಈ ಗೆಳೆಯರಿಗಾಗುತ್ತದೆ, ಇಲ್ಲಿ ಹೆಚ್ಚಿನ ಪಾತ್ರಗಳನ್ನಿಟ್ಟುಕೊಳ್ಳದೆ ಸೀಮಿತ ಪಾತ್ರ ಬಳಸಿಕೊಂಡು ನಮ್ಮ ಜನ ತಿಳಿದುಕೊಳ್ಳಬೇಕಾದ ಮೆಸೇಜನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರಿಲ್ಲಿ ಮಾಡಿದ್ದಾರೆ, ಯಾವುದೆ ಅಬ್ಬರ ಆಡಂಬರವಿಲ್ಲದೆ, ಮನರಂಜನೆಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ನೀತಿಕಥೆ ಹೇಳುವ ಚಿತ್ರ ಆಡೇ ನಮ್ ಗಾಡು.
ರಾಮ ರಾಮ ರೇ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕರಾವ್ ಅಲ್ಲದೆ ಕಳ್ಳ ಸ್ವಾಮೀಜಿಯಾಗಿ ಬಿ. ಸುರೇಶ್ ಇವರೆಲ್ಲ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ, ಬಿ.ಬಿ.ಆರ್.ಫಿಲಂಸ್ ಹಾಗೂ ಎವರೆಸ್ಟ್ ಇಂಡಿಯಾ ಎಂಟರ್ಟೈನರ್ಸ್ ಬ್ಯಾನರ್ ಅಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ ಉತ್ತವಾಗಿದೆ. ಅಲ್ಲದೆ ಬಿ.ಎಸ್.ಕೆಂಪರಾಜು ಅವರ ಸಂಕಲನ ಚಿತ್ರಕ್ಕೆ ಹೊಸ ರೂಪ ನೀಡಿದೆ, ಆರ್.ಕೆ. ಸ್ವಾಮಿನಾಥನ್ ಅವರ ಸಂಗೀತ ಕಥೆಯ ಓಟಕ್ಕೆ ಸಾಥ್ ನೀಡಿದೆ.